ಕೊಪ್ಪಳ: ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ಖಂಡಿಸಿದ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ಸಾಲೋಣಿ ನಾಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಅವರು, ಶಿವರಾಜ್ ತಂಗಡಗಿ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಪ್ರಕರಣ ದಾಖಲು ಮಾಡಲಾಗಿದೆ.
ಚುನಾವಣೆಯ ಸೆಕ್ಟರ್ ಆಫೀಸರ್ ಗ್ಯಾನನಗೌಡ ಎನ್ನುವವರಿಂದ ದೂರು ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಜತೆಗೆ ಸಚಿವ ಶಿವರಾಜ್ ವಿರುದ್ದ ಪ್ರತಿಭಟನೆ ಮಾಡಿದ್ದ ಮಾಜಿ ಶಾಸಕನ ಪುತ್ರನ ಮೇಲೆಯೂ ಪ್ರಕರಣ ದಾಖಲಾಗಿದೆ.
ಪರವಾನಗಿ ಪಡೆಯದೇ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಬಸವರಾಜ್ ದಡೇಸೂಗೂರು ಪುತ್ರ ಮೌನೇಶ್ ದಡೇಸೂಗೂರು ಸೇರಿದಂತೆ ಬಿಜೆಪಿ ಪ್ರಮುಖರ ಮೇಲೆ ಪ್ರಕರಣ ದಾಖಲಾಗಿದೆ. ಇವರ ಮೇಲೆ ಚುನಾವಣೆ ವೀಕ್ಷಕರಾದ ರಾಜಶೇಖರಗೌಡ ಅವರ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ವಿವಾದ ಸೃಷ್ಟಿಸಿದ್ದ ತಂಗಡಗಿ ಹೇಳಿಕೆ: ಕಾರಟಗಿಯಲ್ಲಿ ಇತ್ತೀಚೆಗೆ ಕಾಂಗ್ರಸ್ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮೋದಿ ಅಧಿಕಾರಕ್ಕೆ ಬರುವಾಗ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದರಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ? ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ಕೊಟ್ರಾ? ಆದರೂ ಯುವಕರು, ವಿದ್ಯಾರ್ಥಿಗಳು ಇನ್ನೂ ಮೋದಿ ಮೋದಿ ಎಂದು ಹೇಳುತ್ತಿದ್ದಾರೆ. ಅಂಥವರ ಕಪಾಳಕ್ಕ ಹೊಡೀಬೇಕು ಎಂದು ಹೇಳಿದ್ದರು.
ಮಾತ್ರವಲ್ಲದೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ ಇದೇ ರೀತಿ ಸುಳ್ಳುಗಳನ್ನು ಹೇಳಿದರೆ ಕೇಳ್ತಾ ಕೂರಬೇಕಾ? ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡ್ತೇನೆ ಎಂದಿದ್ದವರು ಒಂದಾದರೂ ಮಾಡಿದ್ರಾ? ಈಗ ನೋಡಿದ್ರೆ ಸಮುದ್ರದ ಆಳಕ್ಕೆ ಹೋಗಿ ನವಿಲುಗರಿಯಿಂದ ಪೂಜೆ ಮಾಡಿದ್ದಾರೆ. ಯಾವ ಪ್ರಧಾನಿಯಾದರೂ ಈ ರೀತಿ ಎಲ್ಲ ಮಾಡ್ತಾರಾ ಎಂದು ವ್ಯಂಗ್ಯವಾಡಿದ್ದರು.
